ಪ್ರಖ್ಯಾತ ಲೇಖಕರಾದ ಎಸ್. ಎಲ್. ಭೈರಪ್ಪನವರ 'ನಿರಾಕರಣ' ಕಾದಂಬರಿಯು ಸಂಸಾರವನ್ನು ನಿರಾಕರಿಸಿ ವ್ಯಕ್ತಿ ಸಮಾಜದ ಎಲ್ಲ ಸಂಬಂಧಗಳನ್ನೂ ಕಳಚಿಕೊಂಡು ಒಂಟಿಯಾಗುವ, ವಿರಕ್ತ ಜೀವನವನ್ನು ಬೋಧಿಸುವ ಭಾರತೀಯ ತತ್ತ್ವದ ಮುಖವೊಂದನ್ನು ವಿಶ್ಲೇಷಿಸುವ ಯತ್ನವಾಗಿದೆ.ಈ ಕಾದಂಬರಿಯ ನಾಯಕ ನರಹರಿಯ ವಾಸ್ತವ ಹಾಗೂ ಅದರ್ಶ ಜೀವನದ ನಿರಂತರ ಭ್ರಮಣೆಯೇ ಇಲ್ಲಿಯ ಕಥಾವಸ್ತು. ವ್ಯಕ್ತಿ ಹಾಗೂ ಸಮಾಜಕ್ಕಿರುವ ಅಭೇದ್ಯ ಸಂಬಂಧವನ್ನು ಕಾದಂಬರಿ ಪ್ರತಿಪಾದಿಸುತ್ತದೆ. ಐದು ಪುಟ್ಟ ಮಕ್ಕಳನ್ನು ಸಾಕಲು ಮನೆಯಲ್ಲಿ ಹೆಣ್ಣು ದಿಕ್ಕಿಲ್ಲದ ತಂದೆಯು, ಅವರನ್ನೆಲ್ಲ ದತ್ತು ಕೊಡುವುದಾಗಿ ಮುಂಬೈಯ ಟೈಮ್ಸ್ ಪತ್ರಿಕೆಯಲ್ಲಿ ಜಾಹೀರಾತು ಮಾಡುತ್ತಾನೆ. 'ಬಂಧನಕ್ಕೆ ಮಿತಿ ಎಂಬುದು ಸುಳ್ಳು. ಅಂಟಿದರೆ ಪೂರ್ತಿಯಾಗಿಯೂ ಸೆಳೆದುಬಿಡುತ್ತದೆ – ವಿದ್ಯುತ್ ಶಾಕ್ ನಂತೆ. ಇಲ್ಲ, ಸ್ಪರ್ಶಕ್ಕೆ ಸಿಕ್ಕದಷ್ಟು ದೂರವೇ ಇರಬೇಕು. ಇದಕ್ಕೆ ಮಧ್ಯಮ ಸ್ಥಿತಿ ಇಲ್ಲ' ಎಂಬ ಗ್ರಹಿಕೆಯಿಂದ ಅವನು ನಿರ್ಧರಿಸುತ್ತಾನೆ. ಕನ್ನಡ ಕಾದಂಬರೀ ಪ್ರಪಂಚದಲ್ಲಿ ಒಂದು ವಿನೂತನ ಕೃತಿಯಾಗಿ 'ನಿರಾಕರಣ' ಓದುಗರ ಕೈ ಸೇರಿದೆ.