'ಪರ್ವ' ಕಾದಂಬರಿಯ ನಂತರ ಪ್ರಕಟವಾದ ಭೈರಪ್ಪನವರ ಕಾದಂಬರಿ 'ನೆಲೆ'. ಸಹಜವಾಗಿಯೇ ಈ ಕಾದಂಬರಿಯು 'ಪರ್ವ'ದ ಗಾಢ ನೆರಳಿನ ಅಂಚಿನಲ್ಲಿಯೇ ಸುತ್ತುತ್ತದೆ. ಕಾಮ ಮತ್ತು ಸಾವು ಬದುಕಿನಲ್ಲಿ ವಹಿಸುವ ಪಾತ್ರವನ್ನು ಈ ಕಾದಂಬರಿಯು ಚಿತ್ರಿಸುತ್ತದೆ. ಕಾಳಪ್ಪ ಮತ್ತು ಜವರಾಯಿ 'ನೆಲೆ' ಕಾದಂಬರಿಯ ಪ್ರಮುಖ ಪಾತ್ರಗಳು. ಮದುವೆಯಾಗಿದ್ದರೂ ಮದುವೆಯ ಸಂಸ್ಥೆಯನ್ನು ತಮಗೆ ಬೇಕಾದ ಹಾಗೆ ತಿರುಚುವ ಕುಮಾರ ಮತ್ತು ಮಾಲತಿಯರ ಕುಟುಂಬದ ವ್ಯಾಖ್ಯಾನವು ಮೌಲ್ಯಾತ್ಮಕ ನಿಲುವನ್ನು ಸೂಚಿಸುತ್ತದೆ. ನರ್ಸ್ ಪಾರ್ವತಮ್ಮ ಮತ್ತು ಸುಬ್ಬಲಕ್ಷ್ಮಿಯನ್ನು ಪರಸ್ಪರ ಎದುರು ಇರಿಸಿ ಹೋಲಿಸಲು ಪ್ರಯತ್ನಿಸುತ್ತದೆ. ಹಿರಿಯ ವಿಮರ್ಶಕ ಕೆ.ವಿ. ನಾರಾಯಣ ಅವರು ಈ ಕಾದಂಬರಿಯನ್ನು ಕುರಿತು ಹೀಗೆ ಬರೆದಿದ್ದಾರೆ. 'ಈ ಕಾದಂಬರಿಯ ಶೈಲಿ ಕೂಡ ಗಮನಾರ್ಹವಾಗಿದೆ. ನೇರ ಕಥನದ ಮಾರ್ಗವನ್ನು ಬಿಟ್ಟು ಪಾತ್ರಗಳ ಒಳಹೊರಗನ್ನು ಪಾರದರ್ಶಕಗೊಳಿಸಿ, ಆಂಗಿಕ ಚಲನಗಳಿಂದ ವ್ಯಾಖ್ಯಾನಿಸುತ್ತಾ ನಿರೂಪಿಸುವ ವಿಧಾನವನ್ನು ಪರ್ವದಲ್ಲಿ ಹುಡುಕಿಕೊಂಡ ಭೈರಪ್ಪನವರು ಅದನ್ನು ಇಲ್ಲೂ ಮುಂದುವರೆಸಿದ್ದಾರೆ. ಇದು ಕನ್ನಡ ಕಾದಂಬರಿಗಳ ಶೈಲಿಯ ದೃಷ್ಟಿಯಿಂದ ಕುತೂಹಲಕಾರಿಯಾಗಿದ್ದರೂ ಭೈರಪ್ಪನವರು ವಸ್ತು ವಿನ್ಯಾಸ ಹಾಗೂ ದೃಷ್ಟಿಕೋನದ ನೆಲೆಯಲ್ಲಿ ತಮ್ಮ ಮೂಲ ಆಕೃತಿಯ ಸಾಧ್ಯತೆಗಳನ್ನು ಮುಗಿಸಿಕೊಂಡಂತೆ ತೋರುತ್ತದೆ' ಎಂದು ವಿಶ್ಲೇಷಿಸಿದ್ದಾರೆ.